ಶನಿವಾರ, ಮೇ 4, 2013

ಹಗಲುಗನಸು

ಊರ್ದ್ವಮುಖ ಮಾಡಿ ನಿಂತ ಕನಸೊಂದು
ನಡು ರಾತ್ರಿ ಸ್ಖಲಿಸುತ್ತಿದೆ.
ರೋಮ ರೋಮಗಳ ಜಲಕಿಂಡಿಗಳು
ವಿದ್ಯುತ್ ಮೂಲಗಳು
ನರನಾಡಿಗಳಲ್ಲಿ ಪ್ರವಹಿಸಿ
ಅಂಟು ಬೆವರ ಕಂಟು ಗಮಲು
ಬುದ್ದಿ ಮಂಕು, ದೃಷ್ಟಿ ಕ್ಷೀಣ
ಬೆದೆಯ ಹಾವಿಗೆ ಕಿವಿಗಳಿಲ್ಲ
ಮೂಳೆಗಳಿಲ್ಲ, ತಡವಿದಲ್ಲೆಲ್ಲಾ ಮೆದು ಮಾಂಸ
ಚಪ್ಪರಿಸುವ ರುಚಿ ತಿಂದಷ್ಟೂ ಮುಗಿಯದು
ತೇಗುವ ಮಾತೆಲ್ಲಿ, ಬರಿ ನರಳಿಕೆಗಳು ಮಾತ್ರ

ಹಿರಿಮೆ ಗರಿಮೆಗಳಿಲ್ಲದೇ ಹೊರಳುವಾಗ
ಸರದಿಯಂತೆ ಸರಿದಾಟ ; ಮೇಲೆ-ಕೆಳಗೆ
ಅವುಚಿ ಹಿಡಿದರೂ ಕಿವುಚಿ ತಿಂದರೂ
ಕರಗದ ಮನಸು
ಆಕಾಶದೆಡೆಗೆ ದೃಷ್ಟಿನೆಟ್ಟು ಚಂದ್ರಿಕೆಯನು ಹಿಡಿದೆಳೆದು
ಕುಟ್ಟಿ ಹದ ಮಾಡಿ ಹರಡಿಕೊಳ್ಳುವ
ಶಿಖರ ಸ್ವರೂಪಿ ಕನಸು

ಹಸಿವನ್ನ ಅರಗಿಸಿ ದಾಹ ಸ್ರವಿಸುವ
ನಡುವಲ್ಲಿ ಉಗಮತಾಣ ಚಿಮ್ಮಿದೆ
ಅಲ್ಲೊಂದಿಷ್ಟು ಸ್ಖಲಿತ ಕನಸುಗಳು
ಜೀವಪಡೆವ ತವಕದಲ್ಲೇ ವಸರಿಕೊಂಡು
ಅನಾಥವಾಗಿ ಅದೃಶ್ಯವಾಗುತ್ತವೆ

ಕೊಸರಿಕೊಳ್ಳುತ್ತಿದ್ದ ಮನಸ್ಸು ಧಿಸ್ಸ್..ನೇ
ನಿಟ್ಟುಸಿರ ನಿಡಿಸುಯ್ಯುತ್ತಾ ನಿದ್ರೆಗೆ ಜಾರಿದೆ
ಕುಸಿದು ಬಿದ್ದು ತಡವರಿಸಿ ಪುನಃ ಎದ್ದು
ಸಮಯ ಕಾದಿದೆ ಅವಕಾಶವಾದಿ ಕನಸು.
ನಡುರಾತ್ರಿ ಕಳೆದಿದೆ, ಮುಂಜಾನೆ ಮೂಡಿದೆ
ಮನಸು ಮನಸಾ ಮಾಡಿದರೆ ಮತ್ತೊಂದು ಕನಸು
;ಹಗಲುಗನಸು.

-ಶರತ್ ಚಕ್ರವರ್ತಿ.

ನೀನು ಯಾರು..?

ಅವಳೆಂದಳು ನೀನು ಯಾರು..?
ನನ್ನದೂ ಅದೇ ಪ್ರಶ್ನೆ ; ನಾನು ಯಾರು
ಎದುರಿದೇ ಕನ್ನಡಿ, ಕಣ್ಣಿಗೆ ಕಣ್ಣು ಕೀಲಿಸಿದ್ದೇನೆ
ಕನ್ನಡಿಯೊಳಗಿನ ಕಣ್ಣುಗಳು ಕೂಡ ಹುಡುಕುತ್ತಿವೆ ; ಅದೇನನ್ನೊ
ಮತ್ತೆ ನನ್ನನ್ನೇ ಪ್ರಶ್ನಿಸುತ್ತಿವೆ ; ನೀನು ಯಾರು?

ಕೈಯಿವೆ ಕಾಲಿವೆ ಪಾದಗಳಿಲ್ಲ
ಅಯ್ಯೋ ಪಾದಗಳಿಲ್ಲವ? ಹಾಗಾದರೇ ಪ್ರೇತವೇ?
ಪ್ರೇತಕ್ಕೆ ಪಾದಗಳಿರುವುದಿಲ್ಲವಂತೆ
ಅವ್ವ ಹೇಳಿದ್ದಳು.
ಕಣ್ಣುಗಳಿವೆ, ಮಸ್ತಕದ ಪುರಾವೆಯೂ ಇಲ್ಲ
ಅಲ್ಲೆಲ್ಲಾ ಮುಳ್ಳು ಪೊದೆಗಳು ಒಂದಷ್ಟು ಬಾಡಿದ ಹೂಗಳು
ಸವೆದ ರಸ್ತೆ ಮುರಿದ ಸೌಧಗಳು

ಅರರೇ ಕಿವಿಗಳೆಲ್ಲಿ ಹೋದವು ವಿಶಾಲ ಹಣೆ
ಹಣೆಬರಹಗಳು…?
ಹುಡುಕಬೇಕಾದ ಕಣ್ಣುಗಳು ಪೊದೆಯ ಮರೆಯ ಬೆದೆಗೆ ದೃಷ್ಟಿನೆಟ್ಟಿವೆ.
ಹಸಿ ಹಸಿಯಾಗಿ ಬಿಸುಪುಗೊಂಡ ಕನಸುಗಳು
ಬಿಸಿಯಾಗಿ ಬೆವರುತ್ತಿವೆ ಆ ಕಣ್ಣುಗಳಲ್ಲಿ
ಅದನು ಕಂಡು ಒಂದಷ್ಟು ಲಲನೆಯರು ಛೇಡಿಸುತ್ತಿದ್ದಾರೆ
ಮುಜುಗರ ; ಬೆತ್ತಲಾದಂತೆ
ಇದ್ದೆಲ್ಲಾ ತೆರೆಗಳ ಮೀರಿದಂತೆ
ನಿಧಾನವಾಗಿ ತಲೆಬುರುಡೆ ರೂಪ ಪಡೆಯುತ್ತಿದೆ
ಪಾದಗಳು ಮೂಡತೊಡಗಿವೆ

ಅಸ್ಥಿತ್ವ ಆಕಾಶ ಎರಡು ದಕ್ಕಿವೆ
ನನ್ನೊಳಗೆ ನನ್ನತನವೆದ್ದಿದೆ
ನೆರಳು ಕೂಡ ಈಗ ಪಾದದಡಿಯಲ್ಲೆ
ಗಂಟಲಲಿ ಶ್ವಾಸ ಕಲೆಹಾಕಿ ನಾನೆಂದೆ

“ನಾನು ನಾನೇ”.

ಮುಖ ಗಂಟಿಕ್ಕಿದ್ದವಳು
ನೆಲಬಿರಿವಂತೆ ನಕ್ಕು ನುಡಿದಳು
“ದಡ್ಡ ನೀ ನನಗ್ಯಾರೆಂದು ಹೇಳು”
ಒಮ್ಮೆಲೆ ತೆರೆಗಳು ಕವುಚಿಬಿದ್ದವು
ನಾನೀಗ ನಿರ್ಲಿಪ್ತ.

-ಶರತ್ ಚಕ್ರವರ್ತಿ.

ಮೊದಲ ಸಾಲು…

…………………,
ಮೊದಲ ಸಾಲು ಬಿಟ್ಟು ಎರಡನೆಯದರಲ್ಲಿ ಎಡವಿದ್ದೇನೆ
ಉಗಮತಾಣ ಗೊತ್ತಿಲ್ಲವಾದ್ದರಿಂದ ;
ನೆಟ್ಟಗೆ ನಡೆಯಲು ಕಲಿಯದಿದ್ದರಿಂದ
ಕಲಿತು ಬದುಕುವುದೆಂದರೆ ರೇಜಿಗೆ
ಇದ್ದಂತೆ ಇದ್ದು ಬಿದ್ದ ಗೋಡೆ ಕಟ್ಟದವನು
ಮುಟ್ಟಿಸಿಕೊಳ್ಳದ ವ್ಯಭಿಚಾರಿ ;
ಪೊರೆ ಕಳಚಿ ನಿಂತಿದ್ದೇನೆ

ನುಣುಪು ನಾಜುಕು ಮರೆತು
ಸಿಗಿತು ನಿಂತ ಸಿಬಿರು ; ಹತ್ತರಿ ಒದೆಗೋ
ಕತ್ತರಿ ಬಾಯಿಗೋ ಸಿಗಲಿರುವವನು
ಗೊಂದು ಕುಡಿದು ನುಣುಪಾಗಲಾರೆ ;
ನಿನಗಪ್ಪಿ ನಿಲ್ಲಲಾರೆ
ಬಣ್ಣ ಬಳಿದುಕೊಂಡು ಕಣ್ಣ ಕೆರಳಿಸಲಾರೆ
ನಿನ್ನಾಸೆಗಳಿಗೆಲ್ಲ ಸ್ಥಾವರವಾಗಿ
ಮಹಲು ಕಟ್ಟಲಾರೆ

ಜೊತೆಗಿರುವವುಗಳೆಲ್ಲ ಭ್ರಮೆಗಳು
ಕೊರೆತೆಗಳ ನೆನೆದು ಕೊರಗಲಾರೆ
ಚೌಕಟ್ಟಿನೊಳಗೆ ಕೂರಲಾರೆ
ಈ ಎಲ್ಲವುಗಳೂ ಚೌಕಟ್ಟುಗಳಲ್ಲವೇ
ಎನ್ನುವುದು ನಿನ್ನ ಕೊಂಕುನುಡಿಯಾದರೇ
ಬಾ ಗೆರೆಗಳ ತುಳಿದು, ಚೌಕಟ್ಟುಗಳ ಒಡೆದು
ಮೊದಲ ಸಾಲಾಗು ; ಅನಿವಾರ್ಯವಾದರೆ.
ಸಾವಿನ ಸರಳಸುಂದರಿ ನನ್ನಪ್ಪುವವರೆಗು
ಮಾತ್ರವೇ ನಿನಗವಕಾಶ
ಮೊದಲ ಸಾಲು ನೀನೋ – ಅವಳೋ?
ನಾನಂತೂ ನಿಲ್ಲಲಾರೆ.

-ಶರತ್ ಚಕ್ರವರ್ತಿ