ಸೋಮವಾರ, ಡಿಸೆಂಬರ್ 10, 2012

ಹಡೆದವಳು

ಅಬ್ಬರಿಸಿ ಗೀಳಿಡುವ ಕಡಲಲಿ 
ಹುಟ್ಟಿಲ್ಲದ ದೋಣಿಗೆ ಅಂಬಿಗಳು
ಅಂಬೆಗಾಲಿಗೆ ನೆಲ ಗೀರದಂತೆ
ಅಂಗಳವ ಕಾದಳು
ರಕ್ತಬಸಿದು ಅಮೃತ ಎರೆದಳು 
ಗುಳಿ ಕೆನ್ನೆ ಕಂಡು
ಕಣ್ಣೀರ ಮರೆತವಳು
ಹಡೆದವಳು
; ಹೊತ್ತು ನಡೆದ ತೇರವಳು.

ಬರಬಂದು ಬಿರುಬಿಟ್ಟ ನೆಲದಲಿ 
ಚೇತನ ತುಂಬಿದ ಮಳೆಯವಳು
ಮೂಲೆ ಮೊಡಕುಗಳ ನೀವಿ 
ಅಂದಕೊಟ್ಟಳು
ಹೊತ್ತಿನ ಕೂಳು ಅರಿಕೆ
ಆದಿತೆಂದು ವ್ರತವೆಂದಳು
ದೃಷ್ಟರ ದೃಷ್ಟಿಗೆ ಬೆಂಕಿಯಿಟ್ಟು
ಲಟಿಕೆ ಮುರಿದವಳು
ನೆಲೆ ಅವಳು 
;ನನ್ನ ತಲೆ ಮೇಲಣ ಸೂರವಳು.

ಕೇಳಿದೆಲ್ಲವ ನೀಡುತಾ
ಮಾಡಿದೆಲ್ಲವ ಸಹನೆಯಲಿ ಸಹಿಸುವ 
ಧರೆಯವಳು
ನಗುವ ನನ್ನ ಮುಖವಾಡವ ಕಂಡು 
ನೆಮ್ಮದಿಯ ನಿಟ್ಟುಸಿರಾದವಳು
ನಾ ಸೋತುನಿಂತ ಪಂದ್ಯವೇ ತಪ್ಪೆಂದು 
ಹೀಗಳೆದವಳು
ಉತ್ಸಾಹದಲ್ಲಿ ನಾ ಕೆಮ್ಮಿದನ್ನೂ
ಚೆಂದದ ಕವಿತೆ ಎಂದವಳು
ಮರೆಯಲೇ ಹನಿಗಣ್ಣ ತೀಡಿ
ನಗುವವಳು 
ತನ್ನ ಬೊಗಸೆಯಲೇ ಈ ಬದುಕ ತುಂಬಿಕೊಟ್ಟ 
ತಾಯವಳು ; ನನ್ನ ತಾಯವಳು.



-ಶರತ್ ಚಕ್ರವರ್ತಿ.

ಯುಗಾದಿ

ಹೂದೋಟ ; ನೂರಾರು ಹೂ ಗಿಡಗಳ ನಡುವೆ
ಬಣ್ಣ-ಆಕಾರ ಕನಿಷ್ಟ ಸುಗಂಧವೂ ಇಲ್ಲದ
ಹೂವು ಅದು ; ಹೆಸರಿಗೆ ಮಾತ್ರ
ಚಂದದ ಹಸಿರು ಬಳೆಯ ಕೈಗಳು ಮುರಿದವು
ಓರಗೆ ಹೂಗಳ ಕುತ್ತಿಗೆಯ ; ಕಟ್ಟಿದರು ಮಾಲೆಯ
ಅವಲಕ್ಷಣವೇ ಮೈತಳೆದ ಹೂ
ತಾಕಲಿಲ್ಲ ಯಾರ ಕಣ್ಣಿಗು ; ಯಾರ ಕೈಗು
ಉಸ್ಸೆಂದು ಉಸಿರು ಬಿಟ್ಟಿತು
ನಿರಾಳ ; ಮರುಕ್ಷಣ ತಲ್ಲಣ
ನನ್ನೇಕೆ ಮುರಿಯಲಿಲ್ಲ ; ಕಟ್ಟಲಿಲ್ಲ.

ಓರಗೆಯವರೊಬ್ಬರೂ ಉಳಿದಿಲ್ಲ
ಅರಳುಗಣ್ಣುಗಳ ಅರಳಿಸುತ್ತಿರೋ ಹಸುಗೂಸುಗಳನ್ನೂ
ಬಿಡಲಿಲ್ಲ ; ನನ್ನೇಕೆ ಮುಟ್ಟಲಿಲ್ಲ
ಸುತ್ತ ಹಾಡಿ ನಗುತ್ತಿದ್ದ ಗಂಧವೆಲ್ಲಾ ಮಾಲೆಯಾಗಿ
ಸೇರಿದವು ದೇವರ ಗುಡಿಗೊ
ಮತ್ಯಾರದ ಮುಡಿಗೊ ; ಸತ್ತವರೆಡೆಗೊ
ಇಲ್ಲಿ ಮತ್ತದೇ ಪ್ರಶ್ನೆ ; ನನ್ನೇಕೆ ಮುಟ್ಟಲಿಲ್ಲ

ಕುತ್ತಿಗೆ ಮುರಿಸಿಕೊಂಡು ಮಾಲೆಯಾಗಿ ಮೆರೆದು
ಕಸವಾಗಿ ಮುದುಡಿ ಕೊಳೆತು ಗಂಧ ಕಳೆದು
ದುರ್ಗಂಧವೂ ಮುಗಿಯಿತು ; ನನ್ನೇಕೆ ಮುಟ್ಟಲಿಲ್ಲ
ಪಾಲ್ಗುಣನು ಬಂದಾಗ ತಲೆಕೊಡವಿ ನಿಂತ
ಮರಗಳೆಲ್ಲ ಬೋಳು ; ಉದುರಿದೆ ನಿರ್ಗಂಧ
ಹಪಹಪಿಸಿದೆ ; ಪರಿಪರಿ ಬೇಡಿದೆ
ದಾರಿಹೋಕನೇ ಇನ್ನಾದರೂ ತುಳಿದು ಹೋಗು
ದೊರಕಲಿ ಜೀವನ್ಮುಕ್ತಿ
ಮೂಡಲ ಗಾಳಿ ಬೀಸಿದೆ
ಮತ್ತೆಲ್ಲೋ ಹಾರಿದೆ ; ಇನ್ನೂ ಯಾರು ತುಳಿದಿಲ್ಲ.

ಪಾಳಿ ನೆನೆದು ದಢಬಡಿಸಿ ಬಂದ ಚೈತ್ರನಿಗೆ
ಮೈಯೆಲ್ಲಾ ಹಸುರು ; ಇಬ್ಬನಿಯ ಬೆವರಬಿಂದು
ಗೂಡುಬಿಟ್ಟು ದಾರಿ ಮರೆತಿದ್ದ ಬಳಗವೆಲ್ಲಾ
ಹಿಂದಿರುಗಿ ಚಿಯ್-ಚುಯ್ ಗುಡುತ್ತಿವೆ
ಬರಬೇಗೆ ಕಳೆದು ಚಿಗುರೆಲೆಗೂ ಸ್ವಾಗತ
ಮತ್ತದೇ ಹೂದೋಟ ; ಮತ್ತವೇ ಹೂ ಗಿಡಗಳ ನಡುವೆ…
ಹುಡುಕಲಾರದೇ ಕೈಚೆಲ್ಲಿದ್ದೇನೆ ; ಅರ್ಥದ ವ್ಯರ್ಥವನ್ನರಿತು.


-ಶರತ್ ಚಕ್ರವರ್ತಿ.

ಶುಕ್ರವಾರ, ಡಿಸೆಂಬರ್ 7, 2012

ತ್ರಿಶಂಕು

ಮೇಘನು ಒಮ್ಮೊಮ್ಮೆ ನಗುತ್ತಾನೆ ; ಮಳೆ ಸುರಿಸಿ
ಕೆಲವೊಮ್ಮೆ ಬಿಕ್ಕಳಿಸುತ್ತಾನೆ
ಮಳೆ ಸುರಿಸುತ್ತಲೆ
ಮತ್ತೂ ಒಮ್ಮೆ ಮಂಕಾಗುತ್ತಾನೆ
ಮರುಳನಾಗುತ್ತಾನೆ
ತಲೆ ಕೆದರಿ ಹುಚ್ಚನಾಗುತ್ತಾನೆ

ಮರುಭೂಮಿಯಲಿ ಅತ್ತು
ಮಲ್ಲಿಗೆ ನಗು ಅರಳಿಸುತ್ತಾನೆ
ದಾರಿಗಳಿಲ್ಲದೆಡೆ ತೂರಿಕೊಳ್ಳುತ್ತಾನೆ
ದಿಗಂಬರನಾಗುತ್ತಾನೆ
ಒಮ್ಮೆ ಬೀಗುತ್ತಾ ಒಮ್ಮೆ ಭಾಗುತ್ತಾ
ಮತ್ತೊಮ್ಮೆ ಬೇಗೆಯಲಿ ಬಳಲುತ್ತಾನೆ

ನೆನೆ-ನೆನೆದು ತಣಿಯುತ್ತಾನೆ
ತೆರೆದುಕೊಂಡು ಮುಕ್ತನಾಗುತ್ತಾನೆ
ಅರಳದೇ ನರಳಿ ಮರಳುತ್ತಾನೆ
ಕಿಚ್ಚಾಗುತ್ತಾನೆ-ಪೆಚ್ಚಾಗುತ್ತಾನೆ
ಸ್ವಚ್ಚನಾಗಲು ಹೋಗಿ ಸ್ವೇಚ್ಚನಾಗುತ್ತಾನೆ
ಅತ್ತ ಅರಳದೇ ಇತ್ತ ಉರುಳದೆ
ನಡುವಲ್ಲೇ ನಡುವಾಗಿ ನೋಯುತ್ತಾನೆ

ದಣಿಯುತ್ತಾನೆ ತೀರದಲಿ ಚಿಪ್ಪಾಗುತ್ತಾನೆ
ಕೆರಳೋ ಅಲೆಗಳಲಿ ಕುಣಿಯುತ್ತಾನೆ
ಬೆಂಕಿ ಕೆಂಡ-ಕೊಂಡಗಳಲಿ ಉರಿಯುತ್ತಾನೆ
ಅಸ್ಥಿ ಅಸ್ಥಿತ್ವಗಳ ಸುಟ್ಟುಕೊಂಡರೂ
ಕೊನೆಯಾಗದೇ ಉಳಿಯುತ್ತಾನೆ.

-ಶರತ್ ಚಕ್ರವರ್ತಿ.

15-04-2012

ಬುಧವಾರ, ಡಿಸೆಂಬರ್ 5, 2012

ಕತ್ತಲು

ಇಲ್ಲೆಲ್ಲಾ ಕತ್ತಲುಮಳೆ ನಿಂತು ಮಣ್ಗವಲು
ಚಿಟ್ರಿಡಿಸೋ ಚೀರುಳಗಳ ಗುನುಗು

ಅಲ್ಲಲ್ಲಿ ಇಣುಕಿದೆ
ಬೆಳಕಿನುಳಗಳು ಸುತ್ತಲು
ಕಾಣದಿದೆ ಕತ್ತಲಲಿ
ಬರಿ ಮೈಯ್ಯ ಬೆತ್ತಲು
ಬೆಳಕಿನೂರ ದಾರಿ ಕಳೆದು
ಅತ್ತ ಇತ್ತ ಸುತ್ತ
ಎತ್ತೆತ್ತಲೂ ಕತ್ತಲು

ಕತ್ತಲ ಕಲಕಲಕಿ
ಮೂಡಿದೆ ಕತ್ತಲಾಕೃತಿ
ತೆರೆಮರೆಗಳು ಬೇಕಿಲ್ಲ
ಬೆಳಕಿನ ಬಣ್ಣಗಳರಿವಿಲ್ಲ
ಸರಳಸುಂದರವೀ ಕತ್ತಲು
ಕತ್ತಲ ದಾರಿ ಕತ್ತಲ ಪಯಣ
ಕತ್ತಲಿನೂರ ದೊರೆಯೇ ಕತ್ತಲು
ಸಭ್ಯ ಸೊಬಗಿನ ನವ್ಯ ಬಗೆಗಿನ
ಸೊಗಡೇ ಕತ್ತಲು
ದಿವ್ಯ ಜ್ಞಾನದ ಹೊಳಹೇ ಕತ್ತಲು

ಅಂಧರನರಿತು ಮರುಗಿ ಅಂಧಾಗಿದೆ
ಮೂಗನೆದೆಯ ರಾಗಗತ್ತಲು
ಕಿವುಡನಾಳದ ಮೌನಗತ್ತಲು
ನನ್ನೆದೆಯ ಮರುಳಗತ್ತಲು
ಕತ್ತಲಿಗೆ ಕತ್ತಲೇ ಸುತ್ತಲು
ಕತ್ತಲಿಗೆ ಕತ್ತಲೇ ಎತ್ತೆತಲು

-ಶರತ್ ಚಕ್ರವರ್ತಿ.
20-06-12

ಮಂಗಳವಾರ, ಡಿಸೆಂಬರ್ 4, 2012

ಕವಿತೆಯೆಂದರೆ..

ಕವಿತೆಯೆಂದರೆ ಮಾತು; ಚಂದದ ಮಾತು
ಮಾತಿಗಿಂತ ಮೌನ ಚಂದ
ಹಾಗಾದರೇ ಮೌನವೊಂದು ಕವಿತೆಯೇ!?

ಸ್ವರ ಕರಗಿ ಶೃತಿ ಮರೆತು

ಲಯ ಕಾಣದೇ ಹರಿದರೂ
ಮೌನವು ಚಂದವೇ
ಎಲ್ಲಿಯೂ ಉಕ್ಕದೇ
ಕೆಲವೆಡೆಯಲ್ಲೂ ಬಿಕ್ಕದೇ
ಕ್ಷಿತಿಜದ ಹೊಳಹು ಹೊಳೆಯದ
ಮೌನವೂ ಕೂಡ ಚಂದವೇ
; ಚಂದದ ಕವಿತೆಯೇ!?

ಮುತ್ತಾಗಿಸೋ ಮಾತು ಹರಿದು

ಕೂಡಿ ಕವಿತೆಯಾಗುವ ಸಲುವೆ
ಮೌನದ ಕುತ್ತಿಗೆ ಹಿಸುಕಿರೇ
ಉದುರಿವೆ ಮಾತುಗಳು
ಮುತ್ತುಗಳು; ಚಂದದ ಕವಿತೆಗಳು

ಹರಡಿ ತಿವಿದು ಹುಡುಕದಿರಿ

ಶೃತಿ - ಲಯ - ತಾಳ
ಬೆತ್ತಲ ಸಿರಿಯೇ ಅಂದ
ಸಿಂಗಾರದ ಸೊಬಗಿಗಿಂತ.


-ಶರತ್ ಚಕ್ರವರ್ತಿ.
16-06-12