ಗುರುವಾರ, ಮೇ 3, 2012

ಕಡೆಸಾಲು




ಕಂಬಿ ಹಿಂದೆ ಕೈಕಟ್ಟಿ ನಿಂತ ಖೈದಿಯಂತೆ

ಹೊಂಚು ಹಾಕಿ ಸಂಚು ಹೂಡುತ್ತಿಹ ಮನ 
ಸೆರಗ ಮರೆಯ ನಡುವಿಗಿಣುಕೋ ಕಳ್ಳಗಣ್ಣ. 


ಬೇಟೆ ತಪ್ಪಿ ಉಗ್ರನಾದ ವ್ಯಾಘ್ರನಂತೆ 
ಆಗ್ರಹಿಸಿ ಕುಳಿತಿಹ ಹಸಿವು
ಎಡೆಯೆತ್ತಿ ಬುಸುಗುಡುವ ಉರಗ.


ಕೆಡುಗನಸ ತೆರೆಯಿಂದ ಧಿಕ್ಕನೆ ಎದ್ದಂತೆ
ಮೂಡಿರುವ ಭವಿಷ್ಯದ ಕೊಕ್ಕೆಗಳು 
ಅಬ್ಬರದಿ ಇಳೆಗಿಕ್ಕೊ ಮಿಂಚುಗಳು
ಸಿಡಿಲುಗಳು.


ದಾರಿಗುಂಟ ಗವಲು ಹಿಡಿದು ಅಲೆವ ಡೊಂಕುಬಾಲದಂತೆ 
ದಿಕ್ಕು ಅರಿಯದೇ ಹರಿದಿಹ ಕಣ್ಗಳೋ
ತಿರುಗಿ ಹಾಡಿ ಬೇಡಿ ತಿನುವ ಜಂಗಮರು.


ವರ್ತಮಾನಕೆ ಅಂಜಿ ಕಮರಿದ ಕನಸಂತೆ
ಬತ್ತಿ ಬೆಂಗಾಡಾದ ಆಸೆಗಳಾದವು 
ಇಂದು ಹುಟ್ಟಿ ನಾಳೆ ಸಾಯುವ
ಅಣಬೆಗಳು.


ಅಂಗಾಲಿಗೆ ಚುಚ್ಚಿ ಒಳಗೇ ಮುರಿದ 
ಮುಳ್ಳಂತೆ ಹೆಜ್ಜೆ ಹೆಜ್ಜೆಗೆ ಚುಚ್ಚಿ ಚುಯ್'ಗುಡಿಸಿ
ಕಾಡುವ ಅವಳ ನೆನಪುಗಳು 
ಕವಿತೆಗೆ ಕೊನೆಯಾಗಲೊರಟ
ಕವಿಮನದ ದುಗುಡವನೊತ್ತ
ಕಡೆಸಾಲುಗಳು. 


-ಶರತ್ ಚಕ್ರವರ್ತಿ.
http://sanchalanasahitya.blogspot.in/2012/05/blog-post_03.html