ಶನಿವಾರ, ಏಪ್ರಿಲ್ 13, 2013

ಅಸಹಾಯ ಕೈಗಳು.

ಶಸ್ತ್ರವನ್ನು ಕೈಚೆಲ್ಲಿ ಹೊರಟವನು ಅವನು
ದೇಶ-ಕೋಶ ತ್ಯಜಿಸಿದವನಿಗೆ
ದಾರಿ ನಿರಾಳ ; ರಸ್ತೆ ಸವೆಯುವವರೆಗೆ
ನೆಟ್ಟ ದೃಷ್ಟಿಗಳಾವುವು ಅವನ ಬೆನ್ನಹತ್ತಲಿಲ್ಲ
ನಡೆದೇ ನಡೆದ
ಅನಂತ ದೃಷ್ಟಿಯಲಿ ಎದುರಿದ್ದುದ ಮರೆತ
ಕೆಂಪು ಕಂಗಳ ಹಸಿರು ನರಗಳು
ಕ್ಷೀಣತೊಡಗಿದವು

ಅತ್ತ ಅವನ ಕೋಟೆ ಉರುಳಿತ್ತು
ಮತ್ತೊಬ್ಬ ದೊರೆಗಲ್ಲಿ ಭೋಪರಾಕು
ಇವನಿಲ್ಲಿ ನಡೆಯುತ್ತಲೇ ಇದ್ದಾನೆ
ಕಾಲನೊಬ್ಬನೇ ಅವನ ಸಂಗಾತಿ
ನಿತ್ಯ ಅವರಿಗೆ ಅಡಿ ಮೂಡಿಸುವ ಆಟ
ಒಮ್ಮೆ ಅವ ಮುಂದೆ ಮತ್ತೊಮ್ಮೆ ಇವ
ಅಂತೂ ಕಾಲನ ಕಯ್ಯೇ ಮೇಲಾಯಿತು
ಮುಪ್ಪಿನಪ್ಪುಗೆ ಮುತ್ತಿಡುತ್ತಿತ್ತು
ಕುಸಿದು ಬಿದ್ದವನ ಕಣ್ಣಿಗೆ ಕಾಡಿದೇ
ಅವನದೇ ಭೂತ ; ಮರೆವನ್ನರಸಿ
ದಾರಿ ಸವೆಸಿದವನ ಮುಂದೆ ನೆನಪುಗಳ ಜಾತ್ರೆ

ನಾರುತ್ತಿದೆ ಮುಳ್ಳುಚುಚ್ಚಿ ಕೊಳೆತ ಹುಣ್ಣು
ಮುಡಿಯ ತುಂಬಾ ಜಡೆಯ ಜಡ್ಡು
ಕಾಲನಿಗೆ ಸಡ್ಡು ಹೊಡೆದ ಕ್ರೂರ ಕಣ್ಗಳು
ನಿರ್ವೀರ್ಯ ಪರಿತ್ಯಾಗಿಯ ಕಂಡು ಗೊರವಗಳು ನಕ್ಕಿವೆ
ಬಿದ್ದವನ ಹೊತ್ತು ನಡೆಯಲು ಕಾಲನೇನೋ ಕಾತರ
ಅನ್ವೇಷಕನ ಕಣ್ಗಳ ಕಲ್ಪಿಸುತ್ತಾ ಕುಳಿತ
ಕವಿ ಬೆವರುತ್ತಾನೆ
ಅಸಹಾಯಕ ಕೈಗಳು ಬರೆಯತೊಡುಗುತ್ತವೆ.

-ಶರತ್ ಚಕ್ರವರ್ತಿ.
02-04-13

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ