ಸೋಮವಾರ, ಜೂನ್ 25, 2012

ಕನಸೇ ಸಾಕೆನಗೆ.

ನಿನ್ನ ಮಧುರ ಕನಸ ಕೊಂದು ಮತ್ತೊಂದು ಬೆಳಗು ಮೂಡಿದೆ
ಮೈಮುರಿದು ಆಕಳಿಸಿದ ಹೊದಿಕೆ ಮುದುಡಿ
ಮಲಗಿದ ಕರಿಬೆಕ್ಕ ತಬ್ಬಿಹಿಡಿದು
ಗಲ್ಲಿ ನುಸುಳಿ ಮತ್ತೆಲ್ಲೋ ಚರಂಡಿ ಹಾರಿ ಕೇಕೆ ಹಾಕಿದ್ದ ಮನಸ್ಸು
ಕೊರಳಿಗೆ ಚೈನು ಧರಿಸಿ ಕುಳಿತಿದೆ
ಮಗುಮ್ಮಾಗಿ..

ಕೈಕಾಲುಗಳ ಕಳಚಿ ಪೆಟ್ಟಿಗೆಯೊಳಗೆ ಭದ್ರಗೊಳಿಸಿ
ನಿರ್ವಾತ ಕನಸುಗಳಲಿ ತೆವಳುವಾಗ
ಕಳೆದ ಚಾವಿಯ ತಡ-ಬಡ ತಡವುತ್ತಿರೇ
ಎದೆಬಡಿತವಷ್ಟೇ ಉಳಿದಿದೆ ಜೇಬಿನಲ್ಲಿ


ಬತ್ತಿದ ಕೆರೆಯಲಿ ಸತ್ತಮೀನುಗಳ ಹೆಕ್ಕುತ್ತಾ ಚಾಚಿದ ಕೊಕ್ಕು
ಅಲ್ಲೊಂದಿಷ್ಟು ಹರಿದು ಗಾಳಿಗೆ ತೂರಿಕೊಂಡು
ಚೆಲ್ಲಾಡಿದ ಬಯಕೆಗಳು
ಸ್ಮೃತಿಪಟಲವ ದತ್ತುಪಡೆದ ನೆನಪಿನಲ್ಲಿ
ಹುರಿದು ಹದಮಾಡಿದ ಖಡಕ್-ಖಾರದ
ಸಂಭಾಷಣೆಗಳು, ಹೀಗೆಯೇ ಬುಸುಗುಡುತ್ತಾ ಕುಳಿತ
ನಡುಮಧ್ಯಾಹ್ನ ಉರಿದಿದೆ


ಬಾಣಂತಿ ಕೋಣೆಯ ದೀಪದಂತೆ
ಸುಡುವ ಚಿತಾಗಾರದ ಬೆಂಕಿಯಂತೆ


ಹುಟ್ಟುವ ಹೊಸ ಆಲೋಚನೆಗೆ ಹಾರೈಕೆಯೂ ಇಲ್ಲೆ
ಸತ್ತ ಬಯಕೆಗಳಿಗೆ ಸಂಸ್ಕಾರವೂ ಇಲ್ಲೆ
ಹಗಲೆಲ್ಲಾ ಅಲೆದಾಡಿ ಗುದ್ದಾಡಿದ ಮೇಲೆ
ಸಂಜೆಗೆ ಮೋಡಗಳದ್ದೇ ಗೆಲುವು
ಸೂರ್ಯ ಮೆಲ್ಲಗೆ ತುಳಿದುಕೊಂಡು ತಣಿಯುವನು
ಗೆದ್ದರೂ ಸಾಯುವ ಭಾಗ್ಯ ಮೋಡಗಳದ್ದು; ಒಮ್ಮೊಮ್ಮೆ ಮಾತ್ರ


ಎಲ್ಲಾ ಮುಗಿಯಿತೆನ್ನುವಲ್ಲಿಗೆ ನಗುನಗುತ ಬರುವನು ಚಂದಿರ
ತಾರೆಗಳ ಶಾಲೆಯ ಮಾಸ್ತರ ಅವನು
ಅವನೊಡಗೂಡಿ ಮತ್ತೆ ಕ್ರಿಯೆಗೆ ತೊಡಗಿಕೊಳ್ಳುವವು
ನಿನ್ನದೇ ಮಧುರ ಕನಸುಗಳು
ಬೆತ್ತಲಿಗೆ ಕತ್ತಲ ಹೊದಿಸಿ ಮಲಗಿರುವೆ
ಮತ್ತೇಂದು ಬೆಳಕಾಗದಿರಲೆಂದು.

-ಶರತ್ ಚಕ್ರವರ್ತಿ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ